ಬಂಟ್ವಾಳ: ವ್ಯಕ್ತಿಯ ಕೊಲೆ ಯತ್ನ ಪ್ರಕರಣ: ನಾಲ್ವರ ಬಂಧನ..!!
ಮಂಗಳೂರು: ಬಂಟ್ವಾಳ ಬಸ್ ನಿಲ್ದಾಣದ ಬಳಿ ನಿಂತಿದ್ದ ವೇಳೆ ವ್ಯಕ್ತಿಯೋರ್ವನ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಟ್ವಾಳ ನಗರ ಠಾಣಾ ಪೊಲೀಸರ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಆರೋಪಿಗಳಾದ ಉಳ್ಳಂಜೆ ನೌಷದ್, ಕೈಕಂಬ ನಿವಾಸಿ ನವಾಜ್ ಯಾನೆ ಬೀಡಿ ನವಾಜ್, ನೆಹರುನಗರ ನಿವಾಸಿ ಮೇಹರೂಪ್ ಮತ್ತು ನೆಹರು ನಗರ ನಿವಾಸಿ ರಿಝ್ವಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮೇ 16 ರ ಶುಕ್ರವಾರ ರಾತ್ರಿ ಸುಮಾರು 7.45 ಗಂಟೆಗೆ ಈ ಘಟನೆ ನಡೆದಿದ್ದು, ಅಕ್ಕರಂಗಡಿ ನಿವಾಸಿ ಅಮ್ಮಿ ಯಾನೆ ಹಮೀದ್ ಎಂಬಾತನಿಗೆ ಚೂರಿ ಇರಿದು ಕೊಲೆಗೆ ಯತ್ನಿಸಿ ಬಳಿಕ ಆರೋಪಿಗಳು ಪರಾರಿಯಾಗಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೊಲೀಸ್ ಇನ್ಸ್ ಪೆಕ್ಟರ್ ಆನಂತ ಪದ್ಮನಾಭ ಅವರ ನೇತೃತ್ವದಲ್ಲಿ ಎಸ್.ಐ. ನಂದಕುಮಾರ್, ರಾಮಕೃಷ್ಣ, ಮಂಜುನಾಥ್ ಅವರ ತಂಡವನ್ನು ರಚಿಸಿ ಪತ್ತೆಗೆ ಬಲೆ ಬೀಸಿದ್ದರು.