ನಾವು, ನಮ್ಮ ಮಕ್ಕಳು, ಶಿಕ್ಷಣ ಇಲಾಖೆ, ನಮ್ಮ ಸರಕಾರ ನೋಡಬೇಕಾದ ಕನ್ನಡ ಚಲನಚಿತ್ರ "ಸ್ಕೂಲ್ ಲೀಡರ್...!!!
ಪುತ್ತೂರು: ಒಂದು ಕಡೆ ಸುರಿಯುವ ಮುಂಗಾರು ಮಳೆ... ಇನ್ನೊಂದು ಕಡೆ ೨೦೨೫-೨೬ನೇ ನೂತನ ಶೈಕ್ಷಣಿಕ ವರ್ಷದ ಶುಭಾರಂಭ. ಈ ಸುಸಂದರ್ಭದಲ್ಲಿ "ಸ್ಕೂಲ್ ಲೀಡರ್" ಕನ್ನಡ ಚಲನಚಿತ್ರ ಮೇ:೩೦/೨0೨೫ ಶುಕ್ರವಾರ ಕರಾವಳಿ ತುಂಬಾ ಬಿಡುಗಡೆಗೊಂಡು ಸಂಚಲನ ಮೂಡಿಸಿದೆ.
. ಪುತ್ತೂರು ಭಾರತ್ ಸಿನಿಮಾಸ್ ನಲ್ಲಿ ಗಣ್ಯರ, ಮಾಧ್ಯಮದವರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ಬಿಡುಗಡೆಗೊಂಡ ಕಾರ್ಯಕ್ರಮದಲ್ಲಿ ಮಕ್ಕಳು, ಹೆತ್ತವರು, ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ನೋಡಿ ಸಂತೋಷ ವ್ಯಕ್ತ ಪಡಿಸಿದರು.
. ನಮ್ಮ ಮಕ್ಕಳು ನಮಗೆ ಭವಿಷ್ಯ. ಅವರಿಗೆ ಯೋಗ್ಯ ಗುಣಮಟ್ಟದ ಮೌಲ್ಯಾಧಾರಿತ ಶಿಕ್ಷಣ ನೀಡುವುದು ನಮ್ಮ ಸರಕಾರದ, ಶಿಕ್ಷಣ ಇಲಾಖೆಯ ಆ ಮೂಲಕ ಶಿಕ್ಷಕ-ರಕ್ಷಕ ಸಂಘದವರ ಸಮುದಾಯದ ಆದ್ಯ ಕರ್ತವ್ಯವಾಗಿದೆ.
. ಪ್ರೌಢಶಾಲಾ ಶಿಕ್ಷಣ ಹಂತ, ಅದರಲ್ಲೂ ಎಸೆಸೆಲ್ಸಿ ಹತ್ತನೇ ತರಗತಿ ಭವಿಷ್ಯದ ನಿರ್ಣಾಯಕ ಹಂತ. ಪ್ರೌಢಶಾಲಾ ಮಕ್ಕಳು ತಮ್ಮ ಕನಸುಗಳಿಗೆ ಬಣ್ಣ ಹಚ್ಚುವ, ತಮ್ಮದೇ ಆಲೋಚನೆಗಳಲ್ಲಿ ತೊಡಗಿರುವ ಹದಿಹರೆಯದವರು. ಅವರನ್ನು ಅವರ ಕನಸು ಭವಿಷ್ಯವನ್ನು ಕೇಂದ್ರವಾಗಿಟ್ಟುಕೊಂಡು, ಯುವ ನಿರ್ಮಾಪಕ ಶ್ರೀ ಸತ್ಯೇಂದ್ರ ಪೈ ಈ ಅರ್ಥಪೂರ್ಣ ಮೌಲಿಕ ಚಿತ್ರವನ್ನು ನಿರ್ಮಾಣ ಮಾಡಿರುವರು. ಮೂಲತಃ ಪುತ್ತೂರಿನವರೇ ಆಗಿರುವ, "ಪೆನ್ಸಿಲ್ ಬಾಕ್ಸ್"ಚಿತ್ರದ ಗೀತೆರಚನೆಗೆ ೨೦೧೯ರ ಅತ್ಯುತ್ತಮ ಚಿತ್ರ ಸಾಹಿತಿ ರಾಜ್ಯಪ್ರಶಸ್ತಿ ಪುರಸ್ಕೃತ ಶ್ರೀ ರಜಾಕ್ ಪುತ್ತೂರು ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ರಚಿಸಿ, ಎಲ್ಲೂ ಯಾವುದೇ ಲೋಪ ಬಾರದಂತೆ ಅಚ್ಚುಕಟ್ಟಾಗಿ, ಗುಣಮಟ್ಟದ ತಾಂತ್ರಿಕತೆಯೊಂದಿಗೆ ಚಿತ್ರವನ್ನು ನಿರ್ದೇನ ಮಾಡುವ ಮೂಲಕ "ಸ್ಕೂಲ್ ಲೀಡರ್" ಸೈ ಎನಿಸಿ ಕೊಂಡಿದೆ.
. ಸರಕಾರಿ ಶಾಲಾ ವಾತಾವರಣ, ಮಕ್ಕಳ ಮನೋವಿಕಾಸ, ನಾಯಕತ್ವ ಗುಣ, ಸಮಾಜ ಜಾಗೃತಿ, ಪರಿಸರ ಪ್ರೇಮ, ಮಾನವೀಯತೆ, ಮೌಲ್ಯ, ದೇಶಪ್ರೇಮ ಮೈಗೂಡಿಸಿಕೊಳ್ಳುವ ಮನೋಜ್ಞ ಕಥಾ ಹಂದರ ಹೊಂದಿದೆ.
. ಇಂದು ಸಾಮಾನ್ಯವಾಗಿ ಹಾಸ್ಯಪ್ರಧಾನ ಸಿನಿಮಾಗಳಿಗೆ, ಡಬಲ್ ಮೀನಿಂಗ್ ಸಂಭಾಷಣೆ, ಪ್ರೀತಿಪ್ರೇಮ, ಹೊಡೆದಾಟ, ಬಡಿದಾಟ ಇವುಗಳಿಗೇ ಮಾರು ಹೋಗುವ ಪ್ರೇಕ್ಷಕರು "ಹೌದಾ ಹೀಗೂ ಇದೆಯಾ..?!"ಎಂದು ತಿರುಗಿ ನೋಡುವ ಅನೇಕ ಅಂಶಗಳು "ಸ್ಕೂಲ್ ಲೀಡರ್"ಕನ್ನಡ ಸಿನಿಮಾ ಹೊಂದಿದೆ.
. ಹಾಸ್ಯಕಲಾವಿದರಾಗಿರುವ ಶ್ರೀ ಅರವಿಂದ ಬೋಳಾರ್ ಕನ್ನಡ ಅಧ್ಯಾಪಕರಾಗಿ ಕನ್ನಡಕ್ಕೆ ಯೋಗ್ಯ ಸ್ಥಾನಮಾನ ನೀಡಿದ್ದಾರೆ. ನಮ್ಮ ಊರಿನ ಶ್ರೇಷ್ಠ ಯುವ ಹಾಸ್ಯ ಕಲಾದೀಪ ಶ್ರೀ ದೀಪಕ್ ರೈ ಪಾಣಾಜೆ, ಶಾಲಾ ಮುಖ್ಯಗುರುಗಳಾಗಿ ಜವಾಬ್ದಾರಿಯ ಪಾತ್ರ ವಹಿಸಿದ್ದಾರೆ. ಶ್ರೀ ಭೋಜರಾಜ ವಾಮಂಜೂರು ಹೊಯ್ಗೆ ವ್ಯಾಪಾರಿಯಾಗಿ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ತನ್ನ ಗಾಡಿಗೆ ತನ್ನದೇ ಅಧ್ಯಕ್ಷ ಗಿರಿಯ ನಾಮಫಲಕ ಅಳವಡಿಸಿ ಗಮನ ಸೆಳೆಯುತ್ತಾರೆ. ಹಿರಿಯ ನಟ ಶ್ರೀ ರಮೇಶ್ ಭಟ್ ಶಿಕ್ಷಣ ಸಚಿವರಾಗಿ, ಒಂದು ಪತ್ರಕ್ಕೆ ಸ್ಪಂದಿಸಿ, ಶಾಲೆಗೆ ಸ್ವತಃ ಭೇಟಿ ನೀಡಿ, ಶಾಲಾ ಶೈಕ್ಷಣಿಕ ಸಮಸ್ಯೆ, ಅಧ್ಯಾಪಕರ ಕೊರತೆಗಳ ನೀಗಿಸುವ ತುರ್ತು ಗಮನ ಹರಿಸಿ ಸರಕಾರದ ನಮ್ಮೆಲ್ಲರ ಅಭಿಮಾನಕ್ಕೆ ಪಾತ್ರರಾದ ಹಿರಿಯ ನಟರು.
. ಇಂದು ಶಾಲೆಗಳಲ್ಲಿ, ಪಾಠ-ಪ್ರವಚನಗಳೊಂದಿಗೆ, ಶಿಸ್ತು ಸಂಘಟನೆ ಕ್ರೀಡಾಭಿಮಾನ ಮೂಡಿಸುವಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಬಹಳ ಮಹತ್ವ ಪೂರ್ಣವಾದುದು. ಈ ಪಾತ್ರವನ್ನು ಸಮರ್ಥವಾಗಿ ಅಭಿನಯಿಸಿ ಮುಂದೇ ದೇಶ ಸೇವೆಗಾಗಿ ಯೋಧರಾಗಿ ತೆರಳಿದ್ದರೂ, ಶಾಲಾ ಮಕ್ಕಳಲ್ಲಿ ಶಿಸ್ತು, ನಾಯಕತ್ವ, ದೇಶಾಭಿಮಾನದ ಭಾವ ಮೂಡಿಸಿ,"ಸ್ಕೂಲ್ ಲೀಡರ್" ಕನ್ನಡ ಚಲನ ಚಿತ್ರಕ್ಕೆ ಹೊಸ ತಿರುವು ನೀಡಿದ ನಟರೂ, ಚಿತ್ರದ ಸಹನಿರ್ದೇಶಕರೂ ಆಗಿರುವ ಸುದರ್ಶನ್ ಶಂಕರ್ ಅಭಿನಂದನೀಯರು.
. ನಮ್ಮ ಪುತ್ತೂರಿನ ಹೆಮ್ಮೆಯ ನಟಿ, ಪೆನ್ಸಿಲ್ ಬಾಕ್ಸ್, ಧರ್ಮದೈವ ಚಲನಚಿತ್ರಗಳಲ್ಲಿ ನಟಿಸಿ ಈಗಾಗಲೇ ಭರವಸೆಯ ನಟಿ ಎಂಬ ಹೆಸರಿಗೆ ಪಾತ್ರರಾಗಿರುವ ಕು. ದೀಕ್ಷಾ ದಯಾನಂದ ರೈ ಬೆಟ್ಟಂಪಾಡಿ ಮಾನವೀಯತೆ ಮೆರೆದು, ಮುಂದೆ ಏನಾಗುವುದೋ ಎಂಬ ಕುತೂಹಲವನ್ನು ತನ್ನ ಮುಗ್ದ ನಗು-ನೋಟದಲ್ಲಿ ಅಡಗಿಸಿಟ್ಟ ಅಭಿನಯ ಸಿನಿರಸಿಕರ ಒಡಲು ಗೆಲ್ಲುತ್ತದೆ. ಉಡುಪಿ ಕಟಪಾಡಿಯ ಒಂದು ಸುಂದರ ನೋಟದ ಶಾಲೆಯಲ್ಲಿ ಸುಮಾರು ೨೫ ಶಾಲೆಗಳ ೧೨೦ಹೆಚ್ಚು ವಿದ್ಯಾರ್ಥಿಗಳು, ನಾಯಕ ನಟ, ವಿರೋಧ ಪಕ್ಷದ ನಾಯಕ ಸೇರಿ ಹಾಡು, ಮಾತು, ಅಭಿನಯಗಳಲ್ಲಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿರುವರು. ಒಟ್ಟಿನಲ್ಲಿ ಚಿತ್ರದ ಹಂಚಿಕೆದಾರ, ಶ್ರೀ ಬಾಲಕೃಷ್ಣ ಶೆಟ್ಟಿ, ಇನ್ನೋರ್ವ ಸಹ ನಿರ್ದೇಶಕ ಶ್ರೀ ಅಕ್ಷತ್ ವಿಟ್ಲ ಎಲ್ಲರೂ ಅಭಿನಂದನೀಯರು. ನಾಡಿನ, ದೇಶ-ವಿದೇಶದ ಕನ್ನಡಾಭಿಮಾನಿಗಳು ತಮ್ಮ ಹತ್ತಿರದ ಸಿನಿಮಾ ಥಿಯೇಟರ್ ಗಳಿಗೆ ತೆರಳಿ "ಸ್ಕೂಲ್ ಲೀಡರ್ "ಸಿನಿಮಾ ವೀಕ್ಷಣೆ ಮಾಡಬೇಕು. ನಮ್ಮ ಸರಕಾರ ಮನೋಜ್ಞ, ಸಾಮಾಜಿಕ ಕಳಕಳಿ, ಪರಿವರ್ತನೆಗೆ ದಾರಿದೀಪವಾಗಿರುವ "*ಸ್ಕೂಲ್ ಲೀಡರ್*"ಕನ್ನಡ ಸಿನಿಮಾಕ್ಕೆ ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿ ನೀಡಿ ಪ್ರೋತ್ಸಾಹಿಸ ಬೇಕೆಂದು ಹಾರೈಸೋಣ. ಸಿರಿಗನ್ನಡಂ ಗೆಲ್ಗೆ.. ಸಿರಿಗನ್ನಡಂ ಬಾಳ್ಗೆ. 🟨🟥
✍️ ನಾರಾಯಣ ರೈ ಕುಕ್ಕುವಳ್ಳಿ