BREAKING NEWS: ಲಂಚಕ್ಕೆ ಬೇಡಿಕೆ ಆರೋಪ: ವಿಟ್ಲ ಠಾಣೆಯ ಪಿಎಸ್ಐ ಅಮಾನತು
ವಿಟ್ಲ: ಲಂಚಕ್ಕೆ ಬೇಡಿಕೆ ಆರೋಪ: ವಿಟ್ಲ ಠಾಣೆಯ ಪಿಎಸ್ಐ ಅಮಾನತು| ಅಕ್ರಮ ಜುಗಾರಿ ಅಡ್ಡೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಬೈಕ್ ವಶಪಡಿಸಿಕೊಂಡು, ನಂತರ ಹಣಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ವಿಟ್ಲ ಪೊಲೀಸ್ ಠಾಣೆಯ ಪಿಎಸ್ಐ ಕೌಶಿಕ್ ಬಿ.ಸಿ. ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.
ಮೇ 8, 2025 ರಂದು ವಿಟ್ಲ ಪೊಲೀಸ್ ಠಾಣೆಗೆ ಅಕ್ರಮ ಜುಗಾರಿ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಪಿಎಸ್ಐ ಕೌಶಿಕ್ ಬಿ.ಸಿ. ಅವರು ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ್ದರು.
ಆದರೆ, ದಾಳಿ ವೇಳೆ ಜುಗಾರಿ ಆಟದಲ್ಲಿ ತೊಡಗಿದ್ದ ಯಾರೂ ಸ್ಥಳದಲ್ಲಿ ಪತ್ತೆಯಾಗಿರಲಿಲ್ಲ. ಆದರೆ, ಘಟನಾ ಸ್ಥಳದಲ್ಲಿ ಒಂದು ಮೋಟಾರು ಸೈಕಲ್ ಪತ್ತೆಯಾಗಿತ್ತು.
ಕಾನೂನಾತ್ಮಕ ಕ್ರಮ ಜರುಗಿಸಬೇಕಾಗಿದ್ದ ಪಿಎಸ್ಐ ಕೌಶಿಕ್ ಬಿ.ಸಿ. ಅವರು, ಬೈಕ್ ಮಾಲಕನಿಗೆ ಕರೆ ಮಾಡಿ ಠಾಣೆಗೆ ಬರಮಾಡಿಕೊಂಡಿದ್ದಾರೆ ಎನ್ನಲಾಗಿದೆ. ನಂತರ, ಬೈಕ್ ಮಾಲಿಕನಿಗೆ ಮೂರನೇ ವ್ಯಕ್ತಿಯ ಮೂಲಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣದ ಬೇಡಿಕೆಯಿಟ್ಟಿರುವ ಸಂಭಾಷಣೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ಕುರಿತು ಇಲಾಖಾ ಮಟ್ಟದಲ್ಲಿ ತನಿಖೆ ನಡೆದಿದ್ದು, ಆರೋಪದ ಸತ್ಯಾಸತ್ಯತೆ ದೃಢಪಟ್ಟ ಹಿನ್ನೆಲೆಯಲ್ಲಿ ಪಿಎಸ್ಐ ಕೌಶಿಕ್ ಬಿ.ಸಿ. ಅವರನ್ನು ಇಲಾಖಾ ಶಿಸ್ತು ಕ್ರಮ ಬಾಕಿಯಿರುವಂತೆ ಕರ್ತವ್ಯದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.