BREAKING: ಹನಿಮೂನ್ ಗೆ ತೆರಳಿ ನಾಪತ್ತೆಯಾದ ದಂಪತಿ ಪ್ರಕರಣಕ್ಕೆ ಟ್ವಿಸ್ಟ್. ಪತ್ನಿ ಸೇರಿ ನಾಲ್ವರ ಬಂಧನ
ಏನಿದು ಪ್ರಕರಣ:
ಮಧ್ಯಪ್ರದೇಶದ ಇಂದೋರ್ನ ರಾಜಾ ರಘುವಂಶಿ ಅವರು ಸೋನಮ್ ರಘುವಂಶಿ ಅವರನ್ನು ಮೇ 11 ಅದ್ದೂರಿಯಾಗಿ ವಿವಾಹವಾಗಿದ್ದರು ಇದಾದ ಬಳಿಕ ಮೇ 20 ರಂದು ನವದಂಪತಿಗಳು ಮೇಘಾಲಯಕ್ಕೆ ಹನಿಮೂನ್ ಗೆಂದು ತೆರಳಿದ್ದಾರೆ ಇದಾದ ಬಳಿಕ ಮೇ.23 ರಂದು ನವದಂಪತಿಗಳು ನಾಪತ್ತೆಯಾಗಿದ್ದು ಪೋಷಕರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಪತಿ ರಾಜಾ ರಘುವಂಶಿ ಅವರ ಮೃತದೇಹ ಮೇಘಾಲಯದ ಪೂರ್ವ ಖಾಸಿ ಬೆಟ್ಟ ಪ್ರದೇಶವಾದ ವೀ ಸಾವ್ಡಾಂಗ್ ಜಲಪಾತದ ಆಳದ ಕಮರಿನಲ್ಲಿ ಪತ್ತೆಯಾಗಿತ್ತು ಜೊತೆಗೆ ಈ ಕಪ್ಪು ಬಣ್ಣದ ಜಾಕೆಟ್, ಮಾತ್ರೆ ಚೀಟಿಗಳು, ಸ್ಮಾರ್ಟ್ ಫೋನ್ ಪತ್ತೆಯಾಗಿತ್ತು ಆದರೆ ಪತ್ನಿ ಸೋನಮ್ ಮಾತ್ರ ನಾಪತ್ತೆಯಾಗಿದ್ದರು.
ದಂಪತಿಗಳು ಬಾಡಿಗೆ ಪಡೆದಿದ್ದ ಸ್ಕೂಟರ್ ಪತ್ತೆ:
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪತ್ತೆ ಕಾರ್ಯಾಚರಣೆ ನಡೆಸುವ ವೇಳೆ ದಂಪತಿಗಳು ಪ್ರವಾಸಿ ತಾಣಗಳಿಗೆ ಭೇಟಿ ಮಾಡಲು ಬಾಡಿಗೆಗೆ ಪಡೆದುಕೊಂಡಿದ್ದ ಸ್ಕೂಟರ್ ಪ್ರವಾಸಿ ತಾಣದ ಮಾರ್ಗವಾದ ಸೊಹ್ರಾರಿಮ್ ಎಂಬ ಹಳ್ಳಿಯ ಬಳಿ ಪತ್ತೆಯಾಗಿತ್ತು ಇದರಿಂದ ಅನುಮಾನಗೊಂಡ ಪೊಲೀಸರು ಅಪಹರಣ ಅಥವಾ ಕೊಲೆ ನಡೆದಿರಬಹುದು ಎಂದು ಶಂಕೆ ವ್ಯಕ್ತಪಡಿಸಿ ಕಾರ್ಯಾಚರಣೆ ನಡೆಸಿದ್ದರು.
ಸೋನಮ್ ಸೇರಿ ನಾಲ್ವರ ಬಂಧನ:
ಮೇಘಾಲಯದಲ್ಲಿ ನಾಪತ್ತೆಯಾಗಿದ್ದ ಸೋನಮ್ ಭಾನುವಾರ (ಜೂ.8) ರಂದು ಉತ್ತರಪ್ರದೇಶದ ಘಾಜಿಪುರದಲ್ಲಿ ಪತ್ತೆಯಾಗಿದ್ದು ತಾನೇ ಅಲ್ಲಿನ ಪೊಲೀಸ್ ಠಾಣೆಗೆ ಬಂದು ಶರಣಾಗಿರುವುದಾಗಿ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ ಅಲ್ಲದೆ ಆಕೆಯ ಮಾಹಿತಿ ಮೇರೆಗೆ ಇತರ ಮೂವರನ್ನು ಬಂಧಿಸಲಾಗಿದ್ದು ಬಂಧಿತರು ಸೋನಮ್ ತನ್ನ ಪತಿಯ ಹತ್ಯೆಗೆ ಸುಪಾರಿ ನೀಡಿದ್ದರು ಎಂದು ಹೇಳಿಕೊಂಡಿದ್ದಾರೆ. ಘಟನೆ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಪೊಲೀಸರ ಕಾರ್ಯಕ್ಕೆ ಮೇಘಾಲಯ ಸಿಎಂ ಶ್ಲಾಘನೆ:
ಹನಿಮೂನ್ ಗೆಂದು ಮೇಘಾಲಯಕ್ಕೆ ಬಂದ ನವದಂಪತಿಗಳು ನಾಪತ್ತೆಯಾಗಿದ್ದ ಪ್ರಕರಣವನ್ನು ಮೇಘಾಲಯ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ ಪೊಲೀಸರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹೇಳಿಕೊಂಡಿದ್ದಾರೆ.
ಪೊಲೀಸರ ತಂಡ ಘಾಜಿಪುರಕ್ಕೆ:
ರಾಜ ರಘುವಂಶಿ ಹತ್ಯೆ ಪ್ರಕರಣದ ತನಿಖೆಯನ್ನು ನಡೆಸಲು ಮೇಘಾಲಯ ಮತ್ತು ಇಂದೋರ್ ಪೊಲೀಸರ ತಂಡಗಳು ಸೋಮವಾರ (ಜೂನ್ 9) ಘಾಜಿಪುರಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು ಜೊತೆಗೆ ರಾಜಾ ರಘುವಂಶಿ ಮೃತಪಟ್ಟಿದ್ದ ಸ್ಥಳಕ್ಕೆ ಪತ್ನಿ ಸೋನಮ್ ಅವರನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.