Ration Card ಇನ್ನು ಮುಂದೆ ಪಡಿತರ ಜೊತೆ ಅಗತ್ಯ ವಸ್ತುಗಳನೊಳಗೊಂಡ 'ಇಂದಿರಾ ಕಿಟ್' ವಿತರಣೆ.!! - ಉದ್ದೇಶಿತ ಕಿಟ್ನಲ್ಲಿ ಏನೆಲ್ಲ ಇರಲಿದೆ?
ಈ ಕುರಿತು ಪ್ರಸ್ತಾವವನ್ನು ಆಹಾರ ಇಲಾಖೆ ಸಿದ್ಧಪಡಿಸಿದೆ. ನಂದಿಬೆಟ್ಟದಲ್ಲಿ ಜುಲೈ 2ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾವ ಮಂಡನೆಯಾಗುವ ಸಾಧ್ಯತೆಯಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಅನ್ನ ಭಾಗ್ಯ ಯೋಜನೆಯಲ್ಲಿ ಆದ್ಯತಾ ಕುಟುಂಬಗಳ ಪಡಿತರ ಚೀಟಿದಾರರಿಗೆ (ಪಿಎಚ್ಎಚ್) ತಿಂಗಳಿಗೆ 10 ಕಿಲೋ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಇದರಲ್ಲಿ ಕೇಂದ್ರದ ಪಾಲು ಐದು ಕಿಲೋವಾದರೆ ರಾಜ್ಯದ ಪಾಲು 5 ಕಿಲೋ ಆಗಿದೆ.

ಕೆಲವು ಕುಟುಂಬಗಳು ಪಡೆಯುತ್ತಿರುವ ಅಕ್ಕಿಯ ಪ್ರಮಾಣವು ತಿಂಗಳ ಬಳಕೆಯ ಅಗತ್ಯಕ್ಕಿಂತ ಹೆಚ್ಚು ಇದೆ. ಈ ಹೆಚ್ಚುವರಿ ಅಕ್ಕಿಯು ಕಡಿಮೆ ದರಕ್ಕೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಪಡಿತರ ಅಕ್ಕಿಯ ದುರುಪಯೋಗ ತಪ್ಪಿಸಲು ಹೆಚ್ಚವರಿಯಾಗಿ ಹಂಚಿಕೆ ಮಾಡುವ ಅಕ್ಕಿಯ ಬದಲು ಪೌಷ್ಟಿಕಾಂಶ ಒಳಗೊಂಡ ಅಗತ್ಯ ವಸ್ತುಗಳ ಕಿಟ್ ವಿತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಸದ್ಯದ ಲೆಕ್ಕಾಚಾರ ಪ್ರಕಾರ, ಪ್ರತಿ ಕಿಲೋ ಅಕ್ಕಿಗೆ (ಸಾಗಣೆ ವೆಚ್ಚ ಸೇರಿ) ₹25.50 ವೆಚ್ಚ ತಗಲುತ್ತಿದೆ. ಅಕ್ಕಿ ವಿತರಿಸುವುದಕ್ಕಾಗಿ ಪ್ರತಿ ತಿಂಗಳು ₹573 ಕೋಟಿಯಂತೆ ವಾರ್ಷಿಕ ಒಟ್ಟು ₹6,876 ಕೋಟಿ ವೆಚ್ಚವು ರಾಜ್ಯಕ್ಕೆ ತಗಲುತ್ತಿದೆ. ರಾಜ್ಯ ಸರ್ಕಾರ ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಶೇ 90ಕ್ಕಿಂತಲೂ ಹೆಚ್ಚು ಫಲಾನುಭವಿಗಳು ಹೆಚ್ಚುವರಿ ಅಕ್ಕಿ ಅಥವಾ ನೇರ ನಗದು ವರ್ಗಾವಣೆಯ ಬದಲು ಬೇಳೆಕಾಳುಗಳು, ಎಣ್ಣೆ, ಸಕ್ಕರೆ ಇತ್ಯಾದಿಗಳನ್ನು ಒಳಗೊಂಡಿರುವ ಪೌಷ್ಟಿಕಾಂಶಗಳ ಕಿಟ್ ನೀಡುವಂತೆ ಒಲವು ವ್ಯಕ್ತಪಡಿಸಿದ್ದಾರೆ. ಈ ಕಾರಣಕ್ಕೆ ಹೆಚ್ಚುವರಿ ಅಕ್ಕಿಯ ಬದಲು ಕಿಟ್ ನೀಡುವ ಯೋಜನೆ ರೂಪಿಸಲಾಗಿದೆ ಎಂದು ಆಹಾರ ಇಲಾಖೆಯ ಮೂಲಗಳು ತಿಳಿಸಿವೆ
ಪ್ರಸ್ತಾವಿತ ಕಿಟ್ನಲ್ಲಿ ಗೋಧಿ, ಸಕ್ಕರೆ, ಉಪ್ಪು, ತೊಗರಿ ಬೇಳೆ, ಅಡುಗೆ ಎಣ್ಣೆ, ಚಹಾ ಪುಡಿ, ಕಾಫಿ ಪುಡಿ ನೀಡಲು ಉದ್ದೇಶಿಸಲಾಗಿದೆ. ರಾಜ್ಯದಲ್ಲಿ ಬಿಪಿಎಲ್ ಫಲಾನುಭವಿಗಳ 1.28 ಕೋಟಿ ಕುಟುಂಬಗಳಿವೆ. ಪ್ರತಿ ಕುಟುಂಬದಲ್ಲಿ ಸರಾಸರಿ 3.5 ಫಲಾನುಭವಿಗಳು ಇರಬಹುದೆಂದು ಅಂದಾಜಿಸಲಾಗಿದೆ. ಈ ಕಿಟ್ ನೀಡುವುದರಿಂದ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳಿಗೆ ಅಂದಾಜು ₹400 ವೆಚ್ಚ ತಗಲಬಹುದು. ಆಗ, ₹573 ಕೋಟಿ ಆಗುತ್ತಿರುವ ವೆಚ್ಚ ತಿಂಗಳಿಗೆ ₹512 ಕೋಟಿಗೆ ಇಳಿಯಲಿದೆ. ವಾರ್ಷಿಕ ಒಟ್ಟು ₹6,144 ಕೋಟಿ ಆಗಬಹುದು ಎಂದು ಲೆಕ್ಕ ಹಾಕಲಾಗಿದೆ. ಹೀಗೆ ಅಕ್ಕಿಗೆ ಬದಲಿಯಾಗಿ ಕಿಟ್ ವಿತರಿಸಿದರೆ ಪ್ರತಿ ತಿಂಗಳು ₹60 ಕೋಟಿಯಂತೆ ವಾರ್ಷಿಕ ಅಂದಾಜು ₹720 ಕೋಟಿ ಉಳಿತಾಯ ಆಗಬಹುದು ಎಂದೂ ಇಲಾಖೆ ಲೆಕ್ಕಾಚಾರ ಮಾಡಿದೆ.

ನ್ಯಾಯಬೆಲೆ ಅಂಗಡಿಗಳ ಮೂಲಕ ಆಧಾರ್ ಲಿಂಕ್ ಆಗಿರುವ ಪಡಿತರ ಚೀಟಿಯ ಫಲಾನುಭವಿಯನ್ನು ದೃಢೀಕರಿಸಿಕೊಂಡು ಕಿಟ್ಗಳನ್ನು ವಿತರಿಸಬಹುದು. ರಾಜ್ಯ ಸರ್ಕಾರ ವಿತರಿಸುವುದರಿಂದ 'ಇಂದಿರಾ' ಮತ್ತು 'ಅನ್ನಭಾಗ್ಯ' ಅಡಿಯಲ್ಲಿ ಬ್ರ್ಯಾಂಡ್ ಮಾಡಬಹುದು ಎಂದೂ ಇಲಾಖೆ ಸಿದ್ಧಪಡಿಸಿರುವ ಪ್ರಸ್ತಾವದಲ್ಲಿ ಉಲ್ಲೇಖಿಸಲಾಗಿದೆ.
ಈ ಯೋಜನೆಯನ್ನು ಮೊದಲು ಆಯ್ದ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಬಹುದು. ನಂತರ ಯೋಜನೆಯ ಮೌಲ್ಯಮಾಪನ ನಡೆಸಿ, ಹಂತ ಹಂತವಾಗಿ ರಾಜ್ಯದಾದ್ಯಂತ ವಿಸ್ತರಿಸಬಹುದು. ಕಿಟ್ಗೆ ಅಗತ್ಯವಾದ ವಸ್ತುಗಳನ್ನು ರಾಜ್ಯ ನಾಗರಿಕ ಸರಬರಾಜು ನಿಗಮದಿಂದ ಅಥವಾ ಗೊತ್ತುಪಡಿಸಿದ ಇತರ ಏಜೆನ್ಸಿಗಳ ಮೂಲಕ ಖರೀದಿಸಬಹುದು. ಯೋಜನೆಯ ಪರಿಣಾಮ ಮತ್ತು ಪಾರದರ್ಶಕತೆಯನ್ನು ಖಾತ್ರಿಪಡಿಸಿಕೊಳ್ಳಲು ಸ್ವತಂತ್ರ ಸಂಸ್ಥೆಯಿಂದ ತಪಾಸಣೆ ಮತ್ತು ಸಾಮಾಜಿಕ ಲೆಕ್ಕಪರಿಶೋಧನೆಗೆ ಒಳಪಡಿಸಬಹುದು ಎಂದೂ ಪ್ರಸ್ತಾವದಲ್ಲಿದೆ.
ಕೆ.ಎಚ್. ಮುನಿಯಪ್ಪ, ಆಹಾರ ಸಚಿವ ಪಡಿತರ ಅಕ್ಕಿ ಕಾಳಸಂತೆಗೆ ಹೋಗುವುದನ್ನು ತಡೆಯಲು ಪೌಷ್ಟಿಕಾಂಶ ಹೊಂದಿದ ವಸ್ತುಗಳ ಕಿಟ್ ವಿತರಿಸುವ ಯೋಜನೆ ರೂಪಿಸಲಾಗಿದೆ. ಮುಂದಿನ ಸಚಿವ ಸಂಪುಟ ಸಭೆಗೆ ಪ್ರಸ್ತಾವವನ್ನು ಮಂಡಿಸಲಾಗುವುದು.